Friday, September 25, 2009

ನಿನ್ನ ನೆನಪಾಗುವುದಿಲ್ಲ...

ವಿಷಗಾಳಿಯೇ ತುಂಬಿರುವ ಇಲ್ಲಿ,
ಅದರಲ್ಲೇ ಬದುಕುತ್ತಿದ್ದೇನೆಂದರೆ
ನನಗೇ ನಂಬಲಾಗುತ್ತಿಲ್ಲ
ಅಂತಹುದರಲ್ಲಿ ನೀನು
ನೆನಪಾಗುವುದೇ ಇಲ್ಲ.

ಪಬ್ಬು, ಕ್ಲಬ್ಬುಗಳಲ್ಲಿ ಕುಳಿತಿರುವಾಗ
ಥಳಕು-ಬಳುಕಿನ ಲಲನೆಯರ
ನೋಡಲು ಸಮಯ ಸಾಲುವುದಿಲ್ಲ
ಅಂತಹುದರಲ್ಲಿ ನೀನು
ನೆನಪಾಗುವುದೇ ಇಲ್ಲ.


ಉರಿಯುತ್ತಿರುವ ಸಿಗರೇಟು,
ಮುಗಿಬೀಳುತ್ತಿರುವ ಮೆಸೇಜುಗಳ
ನೋಡಲು ಸಮಯ ಸಾಲುತ್ತಿಲ್ಲ
ಹಾಗಿರುವಾಗ ದೂರದಲ್ಲೆಲ್ಲೋ ಇರುವ
ನೀನು ನೆನಪಾಗುವುದೇ ಇಲ್ಲ.

ಮಾನವೀಯತೆ ಇಲ್ಲದ
ಪ್ರಾಜೆಕ್ಟುಗಳ ಮುಗಿಸಬೇಕಿರುವಾಗ
ಊಟ-ತಿಂಡಿಗೂ ಸಮಯವಿಲ್ಲ.
ಅಂತಹುದರಲ್ಲಿ, ಪ್ರೀತಿ- ಪ್ರೇಮ ಎನ್ನುವ
ನೀನು ನೆನಪಾಗುವುದೇ ಇಲ್ಲ.

ತೃಪ್ತಿ

ನಿನ್ನ ಬಿಟ್ಟು ಹೊರಡುವಾಗ
ಬಹಳಷ್ಟು ಹೆದರಿದ್ದೆ-
ನನ್ನ ಮರೆತು ಬಿದುವೆಯೋ ಎಂದು.
ಆದರೆ ಹಾಗಾಗಲಿಲ್ಲ
ಹಗಲಿರುಳು ಕಾಡುತ್ತಿರುವೆ
ಕನಸಿನಲ್ಲೂ ಬಂದು!

ಹಾಗೆರೀ ನಮ್ಮ ಕಾಗೇರಿ...

ರಾಜಕಾರಣಿಗಳು, 'ಗಣ್ಯ' ವ್ಯಕ್ತಿಗಳು ನುಡಿದಂತೆ ನಡೆಯುವುದು ಅಥವಾ ಸರಳವಾಗಿ ಬದುಕುವುದು ಸಾಧ್ಯವೇ ಇಲ್ಲವಾ ಅಂತ ಆಗಾಗ ಅನಿಸುತ್ತದೆ. ಆದರೆ ಹೆಚ್ಚಾಗಿ ನಮಗಾಗುವುದು ನಿರಾಸೆಯೇ. ಅಂತಹುದರಲ್ಲಿ, ಅಪರೂಪಕ್ಕೆ ಸಿಕ್ಕವರು ನಮ್ಮ ಶಿಕ್ಷಣ ಸಚಿವರಾದ ಕಾಗೇರಿ!

ಬರಿಯ ಭಾಷಣ,ಲೇಖನಗಳಲ್ಲಿ ಕನ್ನಡಾಭಿಮಾನ ಪ್ರದರ್ಶಿಸುವ ಬಹುಸಂಖ್ಯಾತರ ಮುಂದೆ ಸದ್ದಿಲ್ಲದೆ ಒಳ್ಳೆಯ ಕಾರ್ಯ ಮಾಡಿದ್ದಾರೆ.ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಯಲ್ಲಿಯೇ ಕಲಿಸುತ್ತಿದ್ದಾರೆ. ಆ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ. 'ಕಾಲ ಕೆಟ್ಟು ಹೋಗಿದೆ' ,'ಒಳ್ಳೆಯವರಿಲ್ಲ...' ಎಂದು ಮುಂತಾಗಿ ಹೇಳುತ್ತಾ ಕೂರುವ ಬದಲು, ಇರುವ ಒಳ್ಳೆಯತನವನ್ನು ಗುರುತಿಸಬೇಕಿದೆ. ಹಾಗೆ ಮಾಡಿದರೆ ಒಳ್ಳೆಯವರಿಗೂ ಒಳ್ಳೆಯವರಾಗಿರಲು ಸ್ಫೂರ್ತಿ ಬರಬಹುದೇನೋ.