Wednesday, December 9, 2009


ಹಿಂದೆ ಮಂಜು ಮುಸುಕಿದ ಬೆಟ್ಟ...
ತಣ್ಣನೆಯ ವಾತಾವರಣ...
ರೈತ ಹೊಲವನ್ನು ಹದಮಾಡಿದ್ದಾನೆ...
ಇದೆಲ್ಲ ಹಳ್ಳಿಯಲ್ಲಿ ಕಾಣಸಿಗುವ ಸಾಮಾನ್ಯ ದೃಶ್ಯ...
ಆದರೆ...
ನಗರೀಕರಣದ ಭರಾಟೆಯಲ್ಲಿ ಎಲ್ಲರು ನಗರದೆಡೆಗೆ ಆಕರ್ಷಿತರಾಗುತ್ತಿದ್ದಾರೆ...
ಮುಂದೆ ಒಂದು ದಿನ, ನಮಗೆ ಅನ್ನ ಬೆಳೆದು ಕೊಡುವವರಾರು?
ದುಡ್ಡು ಎಷ್ಟಿದ್ದರೂ ತಿನ್ನುವು ಅನ್ನ ತಾನೆ...?

Sunday, November 22, 2009

ರಾಜಕೀಯ

ಉಳಿಯಬೇಕಿದ್ದರೆ

ಮುಖ್ಯಮಂತ್ರಿ ಹುದ್ದೆ

ಬಿಡಬೇಕಾಗುತ್ತದೆ

ಹಲವು ದಿನ ನಿದ್ದೆ

ಉಳಿಸಿಕೊಳಬೇಕಲ್ಲ

ಹಲವು ಜನರ ಒಲವು

ಇಲ್ಲದಿದ್ದರೆ

ಭಿನ್ನಮತೀಯರಿಗೆ ಗೆಲುವು

ಇಂದಿದ್ದವರು ನಾಳೆ

ಇರಲಾರರು ಜೊತೆಗೆ

ಎಲ್ಲರಿಗು ಆಸೆ

ಕುರ್ಚಿಯದ್ದೆ ಕೊನೆಗೆ

ಇಂದು ಈ ಕಡೆ, ನಾಳೆ ಆ ಕಡೆ

ಉಳಿಯಲಿಲ್ಲ ನಿಷ್ಠೆ

ಯಾರಲ್ಲಿದೆಯೋ ಅಧಿಕಾರ

ನಾವವರ ಜೋತೆಗಷ್ಟೇ

ಕೊಡು ಕೊಳ್ಳುವಿಕೆಯಲ್ಲಿ

ಯಾರು ಯಾರಿಗೋ ಪಾಲು

ಚುನಾಯಿಸಿದ ಮತದಾರ

ನೋಡಿಯೇ ಕಂಗಾಲು.

Friday, September 25, 2009

ನಿನ್ನ ನೆನಪಾಗುವುದಿಲ್ಲ...

ವಿಷಗಾಳಿಯೇ ತುಂಬಿರುವ ಇಲ್ಲಿ,
ಅದರಲ್ಲೇ ಬದುಕುತ್ತಿದ್ದೇನೆಂದರೆ
ನನಗೇ ನಂಬಲಾಗುತ್ತಿಲ್ಲ
ಅಂತಹುದರಲ್ಲಿ ನೀನು
ನೆನಪಾಗುವುದೇ ಇಲ್ಲ.

ಪಬ್ಬು, ಕ್ಲಬ್ಬುಗಳಲ್ಲಿ ಕುಳಿತಿರುವಾಗ
ಥಳಕು-ಬಳುಕಿನ ಲಲನೆಯರ
ನೋಡಲು ಸಮಯ ಸಾಲುವುದಿಲ್ಲ
ಅಂತಹುದರಲ್ಲಿ ನೀನು
ನೆನಪಾಗುವುದೇ ಇಲ್ಲ.


ಉರಿಯುತ್ತಿರುವ ಸಿಗರೇಟು,
ಮುಗಿಬೀಳುತ್ತಿರುವ ಮೆಸೇಜುಗಳ
ನೋಡಲು ಸಮಯ ಸಾಲುತ್ತಿಲ್ಲ
ಹಾಗಿರುವಾಗ ದೂರದಲ್ಲೆಲ್ಲೋ ಇರುವ
ನೀನು ನೆನಪಾಗುವುದೇ ಇಲ್ಲ.

ಮಾನವೀಯತೆ ಇಲ್ಲದ
ಪ್ರಾಜೆಕ್ಟುಗಳ ಮುಗಿಸಬೇಕಿರುವಾಗ
ಊಟ-ತಿಂಡಿಗೂ ಸಮಯವಿಲ್ಲ.
ಅಂತಹುದರಲ್ಲಿ, ಪ್ರೀತಿ- ಪ್ರೇಮ ಎನ್ನುವ
ನೀನು ನೆನಪಾಗುವುದೇ ಇಲ್ಲ.

ತೃಪ್ತಿ

ನಿನ್ನ ಬಿಟ್ಟು ಹೊರಡುವಾಗ
ಬಹಳಷ್ಟು ಹೆದರಿದ್ದೆ-
ನನ್ನ ಮರೆತು ಬಿದುವೆಯೋ ಎಂದು.
ಆದರೆ ಹಾಗಾಗಲಿಲ್ಲ
ಹಗಲಿರುಳು ಕಾಡುತ್ತಿರುವೆ
ಕನಸಿನಲ್ಲೂ ಬಂದು!

ಹಾಗೆರೀ ನಮ್ಮ ಕಾಗೇರಿ...

ರಾಜಕಾರಣಿಗಳು, 'ಗಣ್ಯ' ವ್ಯಕ್ತಿಗಳು ನುಡಿದಂತೆ ನಡೆಯುವುದು ಅಥವಾ ಸರಳವಾಗಿ ಬದುಕುವುದು ಸಾಧ್ಯವೇ ಇಲ್ಲವಾ ಅಂತ ಆಗಾಗ ಅನಿಸುತ್ತದೆ. ಆದರೆ ಹೆಚ್ಚಾಗಿ ನಮಗಾಗುವುದು ನಿರಾಸೆಯೇ. ಅಂತಹುದರಲ್ಲಿ, ಅಪರೂಪಕ್ಕೆ ಸಿಕ್ಕವರು ನಮ್ಮ ಶಿಕ್ಷಣ ಸಚಿವರಾದ ಕಾಗೇರಿ!

ಬರಿಯ ಭಾಷಣ,ಲೇಖನಗಳಲ್ಲಿ ಕನ್ನಡಾಭಿಮಾನ ಪ್ರದರ್ಶಿಸುವ ಬಹುಸಂಖ್ಯಾತರ ಮುಂದೆ ಸದ್ದಿಲ್ಲದೆ ಒಳ್ಳೆಯ ಕಾರ್ಯ ಮಾಡಿದ್ದಾರೆ.ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಯಲ್ಲಿಯೇ ಕಲಿಸುತ್ತಿದ್ದಾರೆ. ಆ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ. 'ಕಾಲ ಕೆಟ್ಟು ಹೋಗಿದೆ' ,'ಒಳ್ಳೆಯವರಿಲ್ಲ...' ಎಂದು ಮುಂತಾಗಿ ಹೇಳುತ್ತಾ ಕೂರುವ ಬದಲು, ಇರುವ ಒಳ್ಳೆಯತನವನ್ನು ಗುರುತಿಸಬೇಕಿದೆ. ಹಾಗೆ ಮಾಡಿದರೆ ಒಳ್ಳೆಯವರಿಗೂ ಒಳ್ಳೆಯವರಾಗಿರಲು ಸ್ಫೂರ್ತಿ ಬರಬಹುದೇನೋ.

Thursday, August 20, 2009

ಮೋಡ ಮುಸುಕಿದ ಒಂದು ದಿನ...


<---ಸಾಗರದಲ್ಲಿ ತೇಲುವ ಮಂಜುಗಡ್ಡೆ ಮತ್ತು ಆಗಸದಲ್ಲಿ ತೇಲುವ ಮೋಡ...!!!








<--- ಕಾಮನ ಬಿಲ್ಲೆ ಕಾಮನ ಬಿಲ್ಲೆ...



































ಕರ್ನಾಟಕ ರಾಜ್ಯದ ಭೂಪಟ-ಮೋಡಗಳ ಕೈಚಳಕದಲ್ಲಿ !!!

















Saturday, June 6, 2009

ಹನಿ ಹನಿ

ಇದು ಅಧುನಿಕ ಯುಗ. ಯಾರಿಗೂ ಸಮಯವಿಲ್ಲ. ದಿನವಿಡೀ ನೋಡಲಾಗುವುದಿಲ್ಲ ಎಂದೆ ಟಿ-೨೦ ಕ್ರಿಕೆಟ್ ಪ್ರಸಿದ್ದವಾಗಿದೆ. ಎಲ್ಲವು ಬೇಗಬೇಗನೆ ಆಗಬೇಕು. ಅಂತಿರುವಾಗ, ಪುಟಗಟ್ಟಲೆ ಬರೆದರೆ ಯಾರು ಓದುತ್ತಾರೆ? ಹಾಗಂತ ಓದುವುದು/ಬರೆಯುವುದು ಬಿಡಲಾಗುವುದಿಲ್ಲ. ಹಾಗಾಗಿಯೇ ಹನಿಗವನಗಳು ಜನಪ್ರಿಯವಾಗಿರುವುದು! ಅಲ್ಲದೆ, ಪತ್ರಿಕೆಗಳಲ್ಲಿ ಪುಟವೊಂದರಲ್ಲಿ ಸ್ವಲ್ಪವೇ ಜಾಗ ಉಳಿದುಕೊಂಡರೆ ಬೇರೇನೂ ಹಾಕಲಾಗದಿದ್ದಾಗ ಸಹಾಯಕ್ಕೆ ಬರುವುದು ಈ 'ಹನಿ ' ಗಳೇ. ಮಳೆಗಾಲ ನಿಧಾನವಾಗಿ ಕಾಲಿಡುತ್ತಿರುವುದರಿಂದ ಹೊರಗೆಲ್ಲ ಹನಿ-ತುಂತುರು ಮಳೆ. ಇಲ್ಲೂ ಕೆಲವೊಂದು ಹನಿಗಳು...

ಬೆಲೆ
'ನಿನ್ನ ಮಾತಿಗೆ
ಬೆಲೆಯೇ
ಇಲ್ಲ'
ಎಂದವರು
ಬೆಚ್ಚಿದ್ದು
ನೋಡಿದ ಮೇಲೆ
ಟೆಲಿಫೋನ್ ಬಿಲ್ಲ!

ಸಲಹೆ
ಗೆಳತಿಯರೆಂದು
ಸುತ್ತುತ್ತಿದ್ದ ನನ್ನ
ಕಂಡು
ಮನೆಯಾಕೆ
ಕೇಳಿದಳು:
ಅವರ ಜೊತೆಗೆ
ಹೋಗಿ ನಿಮಗೆ
ಮನೆಯೇಕೆ?

ಕಾರಣ
ಅವನಿಗೇಕೆ
ಅಷ್ಟು ಬೇಸರ?
ಬೇರೇನಿಲ್ಲ-
ಅವನ ಪ್ರೇಯಸಿಗೆ
ಸಿಕ್ಕಿದ್ದಾನಂತೆ
ಬೇರೆ ನಲ್ಲ.

ನೆಪ
ಒಳ್ಳೆಯದು
ಯಾವ
ಪಕ್ಷ ಅಂತೀರಿ?
ಯಾವುದು ಇಲ್ಲ-
ಅದಕ್ಕೆ ನಾನು
ಪಕ್ಷಾಂತರಿ.

ಸಂದಿಗ್ಧ
ನಿನ್ನೊಡನೆ ಮಾತಾಡದಿದ್ದರೆ
ಮಾತಾಡಿಲ್ಲ ಎಂದು ಕೊರಗುವುದು
ಮಾತಾಡಿದರೆ ನನ್ನ
ಜೇಬು ಕರಗುವುದು!

Thursday, May 28, 2009

ಶುಭ ಹಾರೈಕೆ

ಕೇಂದ್ರದಲ್ಲಿ ಹೊಸ ಸರಕಾರ-ಮಂತ್ರಿಮಂಡಲ ರಚನೆಯಾಗಿದೆ.ಮುಂದಿನ ಐದು ವರ್ಷಗಳಿಗೆ ನೆಮ್ಮದಿಯಾಗಿರುವಂತಹ ಕೆಲಸಗಳನ್ನು ಮಾಡಲಿ ಎಂಬುದು ಜನಸಾಮಾನ್ಯರ ಹಾರೈಕೆ.ಹೊಸ ಸರಕಾರಕ್ಕೆ ಮತ್ತು ಮಂತ್ರಿಗಳಿಗೆ ನಮ್ಮ ಮನವಿ:

ಅಧಿಕಾರದಲ್ಲಿದ್ದಾಗ
ಭ್ರಷ್ಟಾಚಾರ
ಮಾಡಿಕೊಳ್ಳಬೇಡಿ
ಆರಿಸಿದ ಜನರಿಗೆ
ಮೋಸ ಮಾಡಿ-
ಕೊಲ್ಲಬೇಡಿ.

ಅಧಿಕಾರ ಎಂದರೆ,ಚುನಾವಣೆಯಲ್ಲಿ ಖರ್ಚುಮಾಡಿದ ಹಣವನ್ನು ವಾಪಸ್ ಸಂಪಾದಿಸಲು ಇರುವ ಅವಕಾಶ ಅಂತ ಭಾವಿಸಿದರೆ ಅದು ಅಕ್ಷಮ್ಯ. ನೀವೇ ದೇವರೆಂದು ಮತದಾರರ ಮುಂದೆ ನಾನಾ ಬಣ್ಣದ ಮಾತುಗಳನ್ನಾಡಿ ಆಮೇಲೆ ಕೈಕೊಡುವುದು ಒಳ್ಳೆಯದಲ್ಲ.ಅವಕಾಶವಾದಿ ಪ್ರೇಮಿಯಂತೆ ಆಗಬಾರದಲ್ಲ?

ಮೊದಲು
'ನೀನೆ ಸರ್ವಸ್ವ'
ಎಂದ ನಲ್ಲ
ಶ್ರೀಮಂತೆ ಒಬ್ಬಳು
ಸಿಕ್ಕಿದಾಗ
'ನೀನ್ಯಾರೋ ಗೊತ್ತಿಲ್ಲ '
ಎಂದನಲ್ಲ!

ಲೋಕಾಯುಕ್ತರ ದಾಳಿಯಾದಾಗ ಜನಸಾಮಾನ್ಯರಿಗೆ ಒಮ್ಮೆ ಖುಷಿಯಾಯಿತು. ಆದರು ಮನದೊಳಗೆ ಪ್ರಶ್ನೆ ಬಂದದ್ದು ಹೀಗೆ:

ಸಿಕ್ಕಿಬಿದ್ದವರಿಷ್ಟೇ;
ಉಳಿದವರು ಎಷ್ಟೋ?
ಬಯಲಾದ ಅಕ್ರಮ
ಕೆಲವೇ ಕೋಟಿಗಳಂತೆ
ತಿಳಿಯದಿರುವುದು
ಇನ್ನೆಷ್ಟು ಕಂತೆ?

ದಿಲ್ಲಿಯಿಂದ ಹಳ್ಳಿ ಬಹುದೂರ ದಾರಿ
ಮಧ್ಯದಲ್ಲಿಯೇ ಹಣ ಹೋಗುವುದು ಸೋರಿ
ಹಾದಿಯಲ್ಲಿಯ ಸೋರಿಕೆಯ ತಡೆಯಬೇಕು
ಇರುವ ಸಂಪತ್ತುಗಳೇ ನಮಗೆ ಸಾಕು.

Wednesday, May 27, 2009

ಮೊದಲ ಮಾತು

ಬ್ಲಾಗೆಂದರೆ
ನಮಗನಿಸಿದ್ದನ್ನು
ನಮಗನಿಸಿದಂತೆ
ಬರೆವ ತಾಣ.
ಸಂಪಾದಕರ
ಹಂಗಿಲ್ಲದೆ ಪ್ರಕಟಿಸಬಹುದಾದ
ಕಾರಣ!

ಹಾಗೆ ಸುಮ್ಮನೆ ಮನಸಿಗನಿಸಿದ್ದನ್ನು,ಮನಸ್ಸನ್ನು ತಟ್ಟಿದ್ದನ್ನು ಬರೆಯಬೇಕೆನಿಸಿತ್ತು. ಎಲ್ಲೋ ಮನದೊಳಗೆ ಉಂಟಾದ ಕಂಪನವನ್ನು ಇತರರಿಗೂ ತಿಳಿಸುವುದು ಉದ್ದೇಶ.

ನಿಯಮಿತವಾಗಿ
ಎಲ್ಲ ತರಗತಿಗಳಲ್ಲೂ
ನಾನಿದ್ದೆ.
ಪಾಠ ಕೇಳುವ ಬದಲು
ಮಾಡುವೆ ನಾ ನಿದ್ದೆ!

ಮೊದಲಿನಿಂದಲೂ ಸೀರಿಯಸ್ಸಾಗಿ ಕುಳಿತೆ ಅಭ್ಯಾಸ. ತಂಟೆ-ತರಲೆ ನನಗೆ ಹೇಳಿ ಮಾಡಿಸಿದ್ದಲ್ಲ. ಈಗಲಾದರೂ ಸ್ವಲ್ಪ ತರಲೆ ಮಾಡೋಣ ಅಂತ ಅನಿಸಿತು.

ನೋಡದಿದ್ದರೆ
ನಿನ್ನ
ಆ ಗಲ್ಲ
ನನ್ನ ಎದೆಗೆ
ಸಮಾಧಾನ
ಆಗಲ್ಲ
-ಹೀಗಂತ ಕನಸು ಕಂಡಿದ್ದರೆ ಅದು ನನ್ನ ತಪ್ಪಲ್ಲ.

ಅದಲು ಬದಲಾಗಿವೆ
ನನ್ನ-ಅವಳ
ಮನಸ್ಸು
ಸಹಜ ಬಿಡಿ
ನಮ್ಮದು
ಅಂತಹ ವಯಸ್ಸು!

ಆ ಕಾಲದಲ್ಲಿ ಮಾತುಕತೆ ಕಡಿಮೆಯಿದ್ದರೂ, ಈಗ ಹಾಗಿಲ್ಲ. ಸಹಿಸಿಕೊಳ್ಳುವುದು ನಿಮ್ಮ ಜವಾಬ್ದಾರಿ!